ಆ ಊರು ಮತ್ತೆ ಕರೆದಿತ್ತು. ಬೆಂಗಳೂರೆಂಬ ಮಹಾಸಾಗರದ ಯಾವುದೋ ಮೂಲೆಯಲ್ಲಿ ಮುಳುಗಿದ ನನಗೆ ಅದರ ಅವಶ್ಯಕತೆಯೂ ಇತ್ತು ಅನ್ನೀ. ನನ್ನೂರು, ನಾ ಬೆಳೆದ ಊರು ಚಂದ. ಗಣೇಶ ಚತುರ್ತಿಯ 3-4 ದಿನ ರಜೆಯನ್ನು ಕಳೆಯಲು ನಮ್ಮ ಸವಾರಿ ಅಲ್ಲಿಗೆ ಹೊರಟಿತ್ತು. ಬೆಂಗಳೂರಿಂದ ಟ್ರೈನ್ ಹತ್ತೋವಾಗಲೇ ನನ್ನ ಬಾಲ್ಯಕ್ಕೆ ನಾನು ಮತ್ತೆ ನಾನು ನಾನಾಗಿ ಪರಿಚಿತನಾಗಿದ್ದೆ.
ಅದೊಂತರ ರೋಮಾಂಚನ. ಆ ಪಶ್ಚಿಮ ಘಟ್ಟ, ಆ ಮಳೆಯೊಂದಿಗಿನ ಚಳಿ, ಮನೆಯ ತಗಡಿನ ಮೇಲೆ ರಾತ್ರಿ ಮಳೆ ಹನಿಯ ನಾದ, ಮಿಂಚುಳ್ಳಿಗಳ ಹಿಡಿಯುವ ಆಟ,ಮಳೆ ಜಿರಳೆಗಳ ಜೋಗುಳ, ಶಾಲೆಯ ಘಂಟೆ, ಊರಾಚೆಯ ಸ್ಮಶಾನ, ಮನೆಯ ಎದುರಿನ ಯಮಾಕಾರದ ಅತ್ತಿ ಮರ,ಹೊಸದಾಗಿ ಕಂಡು ಹಿಡಿದ “ಕನ್ನಡಿ” ಎಂಬ ಮೀನಿನ ಕಾಲ್ಪನಿಕ ರೂಪ ಹಾಗೂ ರುಚಿ,ಸಾರ್ವಜನಿಕ ಗಣೇಶ ಇವುಗಳ ನೋಡುವ-ಕೇಳುವ ಕಾತುರದಲ್ಲಿ ಮನಸು-ದೇಹ ಎರಡೂ ನಿದ್ದೆಗೆ ಜಾರಿತ್ತು.
ಅದು ದಾಂಡೇಲಿಯಿಂದ ಅಣಶಿ ಮೂಲಕ ಕಾರವಾರ ಹೋಗುವ ದಾರಿಯಲ್ಲಿ ಸುಮಾರು 35km ದೂರದಲ್ಲಿ ಇರುವ ಚಿಕ್ಕದಾದ ಊರು. ಹೆಸರು “ಕುಂಬಾರವಾಡ”.ಸುಮಾರು ಸಾವಿರ ಮನೆಗಳಿರಬಹುದು. ಎರಡು ದೇವಸ್ಥಾನ , ಒಂದು ಚರ್ಚ್, ಶಾಲೆ , ಅಮಾವಾಸ್ಯೆಗೆ-ಹುಣ್ಣಿಮೆಗೆ ಕಾಣುತ್ತಿದ್ದ ಡಾಕ್ಟರ್ ಇರೋ ಆಸ್ಪತ್ರೆ ನಾವಿರೋವಾಗ.

